ಯಾದಗಿರಿ: ಸ್ವಚ್ಛ ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ಪಕ್ಷ ಅಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಬೈಕ್ ರ್ಯಾಲಿ ಫೆ.26ರಂದು ಯಾದಗಿರಿಗೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಜಗನಾಥ್ ಚಿಂತನಳ್ಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಕರ್ನಾಟಕಕ್ಕಾಗಿ ನಾವು’ ಘೋಷಣೆಯೊಂದಿಗೆ ಇದೇ ತಿಂಗಳು ಫೆ.19ರಂದು ಬೆಂಗಳೂರಿನ ದೇವನಹಳ್ಳಿಯಿಂದ ಪ್ರಾರಂಭಗೊAಡಿರುವ ಈ ಬೈಕ್ ರ್ಯಾಲಿ ಮಾ.2 ಶನಿವಾರದವರೆಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಸಂಚರಿಸಲಿದೆ. 29 ಜಿಲ್ಲಾ ಕೇಂದ್ರಗಳು ಹಾಗೂ 50ಕ್ಕಿಂತ ಅಧಿಕ ತಾಲೂಕು ಕೇಂದ್ರಗಳು ಸೇರಿದಂತೆ ಸುಮಾರು 82 ನಗರ-ಪಟ್ಟಣಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಕೆಆರ್ಎಸ್ ಪಕ್ಷವು 2021ರಲ್ಲಿ ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ‘ಲಂಚಮುಕ್ತ ಕರ್ನಾಟಕ’ ಅಭಿಯಾನದಲ್ಲಿ 32 ದಿನಗಳ 3500ಕಿ.ಮೀ.ಗಳ ಬೈಕ್ ಜಾಥಾವನ್ನು ಹಮ್ಮಿಕೊಂಡಿತ್ತು. ಈ ವೇಳೆ ರಾಜ್ಯದ ಸಾವಿರಾರು ಮಂದಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದು, ನೂರಾರು ಮಂದಿ ದೇಣಿಗೆಯನ್ನು ನೀಡಿ ಪಕ್ಷಕ್ಕೆ ಬಲ ತುಂಬಿದ್ದಾರೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ಪೂಜಾರಿ ಮಾತನಾಡಿ, ಫೆ.26ರಂದು ಕಲಬುರ್ಗಿ ಜಿಲ್ಲೆಯಿಂದ ಯಾದಗಿರಿ ನಗರದ ಡಿಸಿ ಆಫೀಸ್ ನಿಂದ ಸುಭಾಷ್ ವೃತ್ತ, ಶಾಸ್ತ್ರೀ ವೃತ್ತ, ಅಂಬೇಡ್ಕರ್ ಚೌಕ್, ಕನಕ ಸರ್ಕಲ್ ಮಾರ್ಗವಾಗಿ, ಗಾಂಧಿ ಚೌಕ್, ತರಕಾರಿ ಮಾರುಕಟ್ಟೆ, ಗಂಜ್ ಮೂಲಕ ಹಳೆ ಬಸ್ ನಿಲ್ದಾಣದವರೆಗೆ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ನಂತರ ಸಂಜೆ 4ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಆರ್ಎಸ್ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದೆ. ಅದೇ ರೀತಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಲ್ಲದೇ ಬಿಬಿಎಂಪಿ ಚುನಾವಣೆಗಳಲ್ಲೂ ಕೆಆರ್ಎಸ್ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು, ಪ್ರಾಮಾಣಿಕ ಹಾಗೂ ನ್ಯಾಯಪರ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಲಿದೆ ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ರಾಜ್ಯಾದ್ಯಂತ ಬೈಕ್ ರ್ಯಾಲಿ ಮುಖಾಂತರ ಪ್ರವಾಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯಾದಗಿರಿ ತಾಲೂಕು ಪ್ರಧಾನ ಕಾರ್ಯದರ್ಶಿ ಹಾಗೂ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ, ರಮೇಶ್ ಜೆ ಚೌವಣ್, ಗುರುಮಠಕಲ್ ತಾಲೂಕು ಅಧ್ಯಕ್ಷ ಜಯವಂತ ತಾತಳಗೇರಾ, ಯುವ ಘಟಕದ ಜಿಲ್ಲಾ ಉಪಾದ್ಯಕ್ಷ ಚಾಂದ್ ಪಾಷ ಮನಗನಾಳ ಇದ್ದರು.