ಕೋಲಾರ, ಫೆಬ್ರವರಿ ೨೪ : ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಂಡ್ರಸನ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ೨೦೨೦ ನೇ ಸಾಲಿನಲ್ಲಿ ಆಂಡ್ರಸನ್ಪೇಟೆಯ ವಾಸಿ ಚೌಕು ವಿರುದ್ದ ಕೊಲೆ ಪ್ರಯತ್ನದ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾದಾಗಿನಿಂದ ಆರೋಪಿ ಚೌಕು ತಲೆಮರೆಸಿಕೊಂಡಿದ್ದನು. ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ತನಿಖಾಧಿಕಾರಿ ಅವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಇವರ ವಿರುದ್ದ ೨೦೨೧ನೇ ಆಗಸ್ಟ್ ಮಾಹೆಯಿಂದ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.
ಶುಕ್ರವಾರದಂದು ಆರೋಪಿಯಾದ ಚೌಕು ಅವರು ಇದ್ದಂತಹ ವಿಷಯ ತಿಳಿದ ಕೂಡಲೇ, ಆಂಡ್ರಸನ್ಪೇಟೆ ಪಿಎಸ್ಐ ಚೇತನ್ಕುಮಾರ್, ಸಿಬ್ಬಂದಿಗಳಾದ ವೆಂಕಟೇಶ್, ರಾಜೇಂದ್ರ, ಲೋಕೇಶ್, ರಾಜೇಶ್ ಅವರುಗಳು ೪ ವರ್ಷಗಳ ಬಳಿಕ ಆರೋಪಿ ಚೌಕು ಅವರನ್ನು ಬಂಧಿಸಿ, ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಕಳೆದ ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶಿಸಿದರು.